Caste Census Re-Survey: ಜಾತಿ ಗಣತಿ ಮರು ಸಮೀಕ್ಷೆಗೆ (Caste Census Re-Survey) ಸಚಿವ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ.
ಇಂದು (ದಿನಾಂಕ:12-06-2025) ನಡೆದ ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತುಗಳು.....
▪️ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹತ್ತು ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧಿನಿಯಮ 1995 ಸೆಕ್ಷನ್ 11 (2) ರಂತೆ ಮರುಸಮೀಕ್ಷೆ ಕೈಗೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ.
▪️ಹಿಂದುಳಿದ ಜಾತಿಗಳ ಶಾಶ್ವತ ಆಯೋಗ ಸಲ್ಲಿಸಿರುವ ವರದಿಯ ಮೇಲೆ ಇಂದು ಅಂತಿಮವಾಗಿ ಚರ್ಚೆ ಮಾಡಲು ಕಳೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಿ, ಇಂದು ಒಂದೇ ವಿಷಯದ ಮೇಲೆ ಚರ್ಚೆ ಮಾಡಲಾಗಿದೆ.
▪️ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು 54 ಮಾನದಂಡಗಳನ್ನು ಇಟ್ಟುಕೊಂಡು ಕೈಗೊಂಡು ಮನೆ ಮನೆಗೆ ಭೇಟಿ ನೀಡಿ ಸಲ್ಲಿಸಿರುವ ವರದಿಯಾಗಿದೆ. 2011 ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ 6.11 ಕೋಟಿ ಜನರಿದ್ದರು. ಈ ಜನಸಂಖ್ಯೆ 2015 ರ ವೇಳೆಗೆ 6.35 ಕೋಟಿ ಎಂದು ಅಂದಾಜಿಸಲಾಗಿದೆ. 5.98 ಕೋಟಿ ಜನರು ಸಮೀಕ್ಷೆಗೆ ಒಳಪಟ್ಟಿದ್ದಾರೆ. ಸಮೀಕ್ಷೆ ಪ್ರಾರಂಭವಾಗಿದ್ದು 11.4.2015 ರಂದು ಹಾಗೂ 30-5-2015 ರಂದು ಮುಕ್ತಾಯವಾಗಿದೆ. 1.60 ಲಕ್ಷ ಸಿಬ್ಬಂದಿ ಹಾಗೂ 1.33 ಲಕ್ಷ ಉಪಾಧ್ಯಾಯರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
▪️ಕೇಂದ್ರ ಸರ್ಕಾರವೂ ಎಲ್ಲಿಯೂ ಕೂಡಾ ಸಮಾಜೋ ಶೈಕ್ಷಣಿಕ ಸಮೀಕ್ಷೆ ನಡೆಸುವುದಾಗಿ ಹೇಳಿಲ್ಲ. ನಾವು ಸಮಾಜೋ ಶೈಕ್ಷಣಿಕ ಸಮೀಕ್ಷೆ ನಡೆಸುವಿರಾ ಎಂದು ಕೇಳಿದಾಗಲೂ ಉತ್ತರ ಕೊಡಲಿಲ್ಲ. ಹಾಗಾಗಿ ನಾವು ಮಾಡುತ್ತಿದ್ದೇವೆ. ಸಮಾಜಿಕ-ಶೈಕ್ಷಣಿಕ ಸಮೀಕ್ಷೆ ವರದಿ ಅನ್ವಯ ಸಾಮಾಜಿಕ ನ್ಯಾಯ ನೀಡಲು ಬದ್ಧವಾಗಿದೆ. ಸಮೀಕ್ಷೆಯನ್ನು 90 ದಿನಗಳ ಒಳಗೆ ಮಾಡಲು ಆಯೋಗವನ್ನು ಕೋರುತ್ತೇವೆ. ತೆಲಂಗಾಣದಲ್ಲಿ 70 ದಿನಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ.
▪️ಹತ್ತು ವರ್ಷಗಳಲ್ಲಿ ಜನಸಂಖ್ಯೆ ಹೆಚ್ಚಾಗಿರುತ್ತದೆ. ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಬದಲಾವಣೆಗಳೂ ಆಗಿರುತ್ತವೆ. ಆದ್ದರಿಂದ ಹತ್ತು ವರ್ಷಗಳ ನಂತರ ಸಮೀಕ್ಷೆ ನಡೆಸಬೇಕೆಂದು ಅಧಿನಿಯಮದಲ್ಲಿ ಹೇಳಿದೆ. ಅದರಂತೆ ನಾವು ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ.
▪️ನಿವೃತ್ತ ಅಡ್ವಕೇಟ್ ಜನರಲ್ ಮಧುಸೂದನ ನಾಯಕ್ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾರೆ. ಇನ್ನೂ ಸದಸ್ಯರುಗಳ ನೇಮಕ ಆಗಬೇಕಿದೆ. ಸಮೀಕ್ಷೆ ಕುರಿತು ಚರ್ಚಿಸಲು ಅವರನ್ನು ಸಂಪರ್ಕಿಸಲಾಗುವುದು.
▪️ಹಿಂದುಳಿದ ವರ್ಗಗಳ ಆಯೋಗದ ಅಧಿನಿಯಮ- 1995ರ ಸೆಕ್ಷನ್ 9 (2) ರಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ, ಸಮಸ್ಯೆಗಳ ಬಗ್ಗೆ ಸಮೀಕ್ಷೆ ನಡೆಸಬೇಕು ಎಂದು ಹೇಳಿದೆ. ತಿದ್ದುಪಡಿ ಆಗಿರುವುದು 2014ರಲ್ಲಿ. ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಮೇಲ್ವಿಚಾರಣೆ ಮಾಡಬೇಕು ಎಂದು ಸೆಕ್ಷನ್ (3) ರಲ್ಲಿ ಹೇಳಿದೆ. ಸೆಕ್ಷನ್ 9 (1)ರ ಅನ್ವಯ ಅರ್ಜಿಗಳನ್ನು ಪರಿಶೀಲಿಸಿ ಹಿಂದುಳಿದ ವರ್ಗಗಳಿಗೆ ಸೇರಿಸುವ ಅಥವಾ ತೆಗೆದು ಹಾಕುವ ಅಧಿಕಾರ ಆಯೋಗಕ್ಕೆ ಇರುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ ಹೊಸದಾಗಿ ಸಮೀಕ್ಷೆ ನಡೆಸುವ ಕುರಿತು ಇಂದು ಸಚಿವ ಸಂಪುಟದ ನಿರ್ಧಾರ ಆಗಿದ್ದು ಮುಂದಿನ ದಿನಗಳಲ್ಲಿ ಆಯೋಗದ ಸಲಹೆಯನ್ನೂ ಪಡೆಯಲಾಗುತ್ತದೆ.
▪️ಕಾಂತರಾಜು ಅವರ ನೇತೃತ್ವದ ಆಯೋಗ ಸಮೀಕ್ಷೆ ಮಾಡಿ ಹತ್ತು ವರ್ಷಗಳು ಕಳೆದಿದೆ. ಹತ್ತು ವರ್ಷಗಳಾದ ನಂತರ ಹೊಸದಾಗಿ ಸಮೀಕ್ಷೆ ನಡೆಸಬೇಕೆಂದು ಸೆಕ್ಷನ್ 11(1) ರಲ್ಲಿ ಹೇಳಲಾಗಿದ್ದು ಅದರ ಪ್ರಕಾರ ತೀರ್ಮಾನ ತೆಗೆದುಕೊ೦ಡಿದ್ದೇವೆ.
▪️ಲೋಕಸಭಾ ಚುನಾವಣೆ ಬಂದಿದ್ದರಿಂದ ವರದಿಯ ಬಗ್ಗೆ ಚರ್ಚೆ ಮಾಡಲಾಗಲಿಲ್ಲ. ನಂತರ ನಮ್ಮ ಸರ್ಕಾರ ವರದಿಯನ್ನು ಪಡೆದು 2025 ರಲ್ಲಿ ಸಚಿವ ಸಂಪುಟದಲ್ಲಿ ಮಂಡಿಸಲಾಗಿದೆ. ಸಚಿವ ಸಂಪುಟದಲ್ಲಿ ಮಂತ್ರಿ ಮಂಡಲದ ಸದಸ್ಯರು ಅಭಿಪ್ರಾಯಗಳನ್ನು ನೀಡಿದ್ದಾರೆ. ಅಂತಿಮವಾಗಿ ಇಂದು ವರದಿಯ ಬಗ್ಗೆ ಚರ್ಚೆ ಮಾಡಿದ್ದೇವೆ.
▪️ಪಕ್ಷದ ವರಿಷ್ಠರು ನನ್ನನ್ನು ಮತ್ತು ಉಪಮುಖ್ಯಮಂತ್ರಿಗಳನ್ನು ಕರೆದು ವರದಿ ಹತ್ತು ವರ್ಷಗಳಷ್ಟು ಹಳೆಯದಾಗಿದ್ದು, ಕಾನೂನು ಪ್ರಕಾರ ಅನೇಕ ಬದಲಾವಣೆಗಳು ಮತ್ತು ಬೆಳವಣಿಗೆಗಳು ಆಗಿರುತ್ತವೆ ಎಂದು ಸಲಹೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ತಿದ್ದುಪಡಿ ವಿಧೇಯಕ (2014) ಸೆಕ್ಷನ್ 11 ಕಲಂ (1) ರಂತೆ ರಾಜ್ಯ ಸರ್ಕಾರವು ಯಾವುದೇ ಸಮಯದಲ್ಲಿ ಈ ಅಧಿನಿಯಮ ಜಾರಿಗೆ ಬಂದ ದಿನಾಂಕದಿಂದ 10 ವರ್ಷಗಳ ಅವಧಿ ಮುಕ್ತಾಯವಾದಾಗ, ಮತ್ತು ಅದರ ನಂತರ ಬರುವ ಪ್ರತಿ 10 ವರ್ಷಗಳು ಮುಕ್ತಾಯವಾಗುವಾಗ ಹಿಂದುಳಿದ ವರ್ಗವಾಗಿ ಉಳಿಯದೇ ಹೋಗಿರುವ ವರ್ಗಗಳನ್ನು ಪಟ್ಟಿಯನ್ನು ತೆಗೆದುಹಾಕುವುದು ಅಥವಾ ಹೊಸ ಹಿಂದುಳಿದ ವರ್ಗಗಳನ್ನು ಪಟ್ಟಿಗೆ ಸೇರಿಸುವದು ಎ೦ದು ಸ್ಪಷ್ಟವಾಗಿದೆ ಹೇಳಿದೆ. ಕಲಂ 2 ರಲ್ಲಿ ಹೇಳಿದಂತೆ ಆಯೋಗದ ಅಧ್ಯಕ್ಷರಾದ ಮಧುಸೂದನ ನಾಯಕ್ ಅವರ ಸಲಹೆಯನ್ನೂ ಪಡೆಯಲಾಗುವುದು.
▪️ಕಾಯ್ದೆಯ ಸೆಕ್ಷನ್ 11 ರಂತೆ ಹತ್ತು ವರ್ಷಗಳ ನಂತರ ಸಮೀಕ್ಷೆಯ ವರದಿ ಮಾನ್ಯವಾಗುವುದಿಲ್ಲ. ಜನಸಂಖ್ಯೆ, ಶೈಕ್ಷಣಿಕ ಸಾಮಾಜಿಕ ಬೆಳವಣಿಗೆಗಳು ಆಗಿರುತ್ತವೆ.
No comments:
Post a Comment