ರಾಜ್ಯ ಸರಕಾರಿ ನೌಕರರು ಹಾಗೂ ಅವರ ಕುಟುಂಬದವರಿಗೆ ನಗದುರಹಿತ ವೈದಕೀಯ ಚಿಕಿತ್ಸಾ ವ್ಯವಸ್ಥೆ ಕಲ್ಪಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ' ಅಕ್ಟೋಬರ್ 1ರಿಂದ ಜಾರಿಯಾಗಿದ್ದು, ಲಕ್ಷಾಂತರ ನೌಕರ, ಸಿಬ್ಬಂದಿ ಸರಕಾರಿ ಹಾಗೂ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರಕಾರ ಅವಕಾಶ ಕಲ್ಪಿಸಿದೆ. ಸುಮಾರು 2000 ಕಾಯಿಲೆಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ.
ರಾಜ್ಯ ಸರಕಾರಿ ನೌಕರರು ಮತ್ತು ಅವರ ಕುಟುಂಬಸ್ಥರಿಗೆ ಸರಕಾರ 'ಕರ್ನಾಟಕ ಆರೋಗ್ಯ ಸಂಜೀವಿನಿ' ಎಂಬ ಮಹತ್ವಾಕಾಂಕ್ಷಿ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಿದೆ. ವಿವಿಧ ವರ್ಗಗಳ ನೌಕರರ ನಿಗದಿತ ಕಂತು ವೇತನದಲ್ಲಿಯೇ ಕಡಿತಗೊಳ್ಳುವ ವ್ಯವಸ್ಥೆ ರೂಪಿಸಲಾಗಿದೆ. ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡುವ ಉದ್ದೇಶ ಹೊಂದಿರುವ ಯೋಜನೆಯ ಇತ್ಯೋಪರಿ ಇಲ್ಲಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ' ಅನುಷ್ಠಾನವಾಗಿದೆ. ಅರ್ಹ ನೌಕರರ ಸಿಬ್ಬಂದಿಯ ವೇತನದಿಂದ ಮಾಸಿಕ ವಂತಿಗೆ ಕಡಿತಕ್ಕೆ ಸಮ್ಮತಿ ನೀಡಿ ನಗದು ರಹಿತ ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ. ಗ್ರೂಪ್- ಎ ವೃಂದಕ್ಕೆ ಮಾಸಿಕ 1000 ರೂ., ಗ್ರೂಪ್- ಬಿ 500 ರೂ., ಗ್ರೂಪ್ - ಸಿ 350 ರೂ. ಹಾಗೂ ಗ್ರೂಪ್ - ಡಿ ವೃಂದಕ್ಕೆ 250 ರೂ. ವಂತಿಗೆ ಮೊತ್ತ ನಿಗದಿಪಡಿಸಲಾಗಿದೆ. ಯೋಜನೆಯಡಿ ಸೇವೆ ಪಡೆಯುವುದು ನೌಕರರಿಗೆ ಐಚ್ಛಿಕವಾಗಿದೆ. ಬೇಡ ಎನ್ನುವವರು ಈ ಯೋಜನೆಯಿಂದ ದೂರ ಉಳಿಯಬಹುದು.
ರಾಜ್ಯ ಸರಕಾರಿ ನೌಕರರು ಮತ್ತು ಅವರ ಅವಲಂದಿಕೆ ಸದಸ್ಯರು, 1963ರ ವೈದ್ಯಕೀಯ ಹಾಜರಾತಿ ನಿಯಮಗಳನ್ನದು ಕೆಲವೊಂದು ಇಲಾಖೆ/ ಗುಂಪುಗಳನ್ನು ಹೊರತುಪಡಿಸಿ ಎಲ್ಲ ಸರಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರು 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ'ಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
▪️ಪ್ರೊಬೇಷನರಿ ಅವಧಿಯಿಂದಲೇ ಅವಕಾಶ:
ನೌಕರರು ಪ್ರೊಬೇಷನರಿ ಅವಧಿಯಲ್ಲಿದ್ದರೂ ಯೋಜನೆಗೆ ಅರ್ಹರು. ಮಲಮಕ್ಕಳಿಗೂ ಈ ಯೋಜನೆಯಡಿ ಸೌಲಭ್ಯ ಪಡೆಯಬಹುದು. ಪತಿ-ಪತ್ನಿ ಇಬ್ಬರೂ ಸರಕಾರಿ ಉದ್ಯೋಗಿಗಳಾಗಿದ್ದರೆ ಹೆಚ್ಚಿನ ಮೂಲ ವೇತನ ಪಡೆಯುವ ಉದ್ಯೋಗಿ ಮುಖ್ಯ ಕಾರ್ಡ್ ಹೋಲ್ಡರ್ ಆಗಿ ನೋಂದಾಯಿಸಿಕೊಳ್ಳುತ್ತಾರೆ. ಆದರೆ, ಇಬ್ಬರು ಉದ್ಯೋಗಿಗಳು ತಮ್ಮ ಪೋಷಕರನ್ನು ಅವಲಂಬಿತರನ್ನಾಗಿ ಸೇರಿಸ ಬಯಸಿದರೆ ಇಬ್ಬರೂ ಪ್ರತ್ಯೇಕವಾಗಿ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.
▪️ಕುಟುಂಬ ಪಿಂಚಣಿ ಮಿತಿ:
ಮಹಿಳಾ ಸರಕಾರಿ ಉದ್ಯೋಗಿಯು ತನ್ನ ತಂದೆ-ತಾಯಿ ಅಥವಾ ಅತ್ತೆ-ಮಾವನನ್ನು ಯೋಜನೆಯಡಿ ಸೌಲಭ್ಯಕ್ಕೆ ಸೇರಿಸಿಕೊಳ್ಳಲು ಅವಕಾಶವಿದೆ. ಆದರೆ, ಕೆಎಎಸ್ಎಸ್ ನಿಯಮದಂತೆ ಸರಕಾರಿ ನೌಕರರೊಂದಿಗೆ ವಾಸವಾಗಿದ್ದು, ಕನಿಷ್ಠ ಮಾಸಿಕ ಆದಾಯ,ಕುಟುಂಬ ಪಿಂಚಣಿ 127,000 ರೂ. ಚಾಲ್ತಿಯಲ್ಲಿದ್ದ ತುಟ್ಟಿಭತ್ಯೆಗಳನ್ನು ಒಳಗೊಂಡ ಮೊತ್ತ ಮೀರುವಂತಿಲ್ಲ.
ನೌಕರನ ಪುತ್ರ/ ಪುತ್ರಿ ಉದ್ಯೋಗಿಗಳಾಗುವವರೆಗೆ ಅಥವಾ 30 ವರ್ಷ ವಯಸ್ಸು ಮೀರುವವರೆಗೆ ಇಲ್ಲವೇ ವಿವಾಹವಾಗುವವರೆಗೆ ಅರ್ಹರು. ಮಕ್ಕಳು ಯಾವುದಾದರೂ ದೈಹಿಕ ಇಲ್ಲವೇ ಮಾನಸಿಕ ಕಾಶ್ವತ ಅಂಗವೈಕಲ್ಯದಿಂದ ಬಳಲುತ್ತಿದ್ದರೂ ಸೌಲಭ್ಯಕ್ಕೆ ಅರ್ಹರಿರುತ್ತಾರೆ.
▪️ನೋಂದಣಿಯಾಗದ ಆಸ್ಪತ್ರೆಯಲ್ಲೂ ಚಿಕಿತ್ಸೆ:
ಖಾಸಗಿ ನೋಂದಾಯಿತವಲ್ಲದ ಆಸ್ಪತ್ರೆಗಳಿಂದ ತುರ್ತು ಸಂದರ್ಭದಲ್ಲಿ ಪಡದ ಚಿಕಿತ್ಸೆಗೆ KASS ದರದಲ್ಲಿ ಮರುಪಾವತಿಗೆ ಅವಕಾಶವಿದೆ.ಮರುಪಾವತಿಯನ್ನು KASS ಪ್ಯಾಕೇಜ್ ದರ ಅಥವಾ ನಿಜವಾದ ವೆಚ್ಚ, ಯಾವುದು ಕಡಿಮೆಯೋ ಅದನ್ನು ಪರಿಗಣಿಸಿ ಆಯಾ ಇಲಾಖಾ ಮುಖ್ಯಸ್ತರಿಂದ ಹಿಂಪಡೆದುಕೊಳ್ಳಲು ಸಾಧ್ಯವಿದೆ. ನಗರ ವ್ಯಾಪ್ತಿಯಲ್ಲಿ ಆಂಬ್ಯುಲೆನ್ಸ್ ಸೇವೆ ಪಡೆದು ಶುಲ್ಕ ಮರುಪಾವತಿಗೆ ಅವಕಾಶವಿದೆ. ಯೋಜನೆಯಡಿ ಹೊರರೋಗಿಯ ಚಿಕಿತ್ಸೆಗೆ ಭರಿಸುವ ಔಷಧ ನಗದುರಹಿತವಾಗಿರುವುದಿಲ್ಲ, ಔಷಧೋಪಚಾರಕ್ಕೆ ನೌಕರರು ಭರಿಸಿದ ವೆಚ್ಚವನ್ನು ಸದ್ಯ ಅನುಸರಿಸಲಾಗುತ್ತಿರುವ ಕ್ರಮದಲ್ಲಿ ನಿಯಂತ್ರಣಾಧಿಕಾರಿಗಳಿಂದ ನೌಕರರು ಮರುಪಾವತಿ ಮಾಡಿಕೊಳ್ಳಬಹುದು. ಜಿಲ್ಲಾ ಸರಕಾರಿ ಸ್ತ್ರೀರೋಗ ತಜ್ಞರ (ವೈದ್ಯಕೀಯ ಕಾಲೇಜು/ ಜಿಲ್ಲಾಸ್ಪತ್ರೆ) ಶಿಫಾರಸ್ಸಿನ ಅನ್ವಯ ಯೋಜನೆಯಡಿ ಐವಿಎಫ್ ಚಿಕಿತ್ಸೆ ಪಡೆಯಲು ಅವಕಾಶವಿದೆ.
▪️ಯಾರಿಗೆ, ಯಾವ ಆಸ್ಪತ್ರೆ ವಾರ್ಡ್ ಸವಲತ್ತು?
ನಿಗದಿ ಪಡಿಸಲಾದ ವಾರ್ಡ್ ಮಾನದಂಡಕ್ಕಿಂತ ಉನ್ನತ ಮಟ್ಟದ ವಾರ್ಡ್ ಪಡೆಯಲು ಯಾರಿಗೂ ಅವಕಾಶವಿಲ್ಲ, ಒಂದು ವೇಳೆ ವಾರ್ಡ್ ಮಾನದಂಡಕ್ಕಿಂತ ಉನ್ನತ ಮಟ್ಟದ ವಾರ್ಡ್ ಸೇವೆ ಪಡೆಯಬಯಸಿದರೆ ಫಲಾನುಭವಿಯು ವ್ಯತ್ಯಾಸದ ಹಣ ಪಾವತಿಸಿ ರಸೀದಿ ಪಡೆಯಲು ಅವಕಾಶವಿದೆ.
▪️ವೈದ್ಯರ ಶಿಫಾರಸು ಬೇಕಿಲ್ಲ:
ಫಲಾನುಭವಿಗಳ ಚಿಕಿತ್ಸೆಗಾಗಿ ಯಾವುದೇ ವೈದ್ಯರಿಂದ ಶಿಫಾರಸು (ರೆಫರಲ್) ತರುವ ಅಗತ್ಯ ಇರುವುದಿಲ್ಲ. ಐವಿಎಫ್, ರಿಪ್ಲೇಸ್ ಮೆಂಟ್, ಟ್ರಾನ್ಸ್ ಪ್ಲಾಂಟ್ (ಅಂಗಾಂಗ ಕಸಿ) ಚಿಕಿತ್ಸೆಗೆ ನಿಗದಿಪಡಿಸಿದ ಅನುಮೋದನೆಯೊಂದಿಗೆ ಮಂಜೂರಾತಿ ಕ್ರಮ ಕೈಗೊಳ್ಳಲಾಗುತ್ತದೆ. ಫಲಾನುಭವಿಗಳು ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು.
ನೋಂದಣಿ ಸಮಯದಲ್ಲಿ ಡಿಡಿಒ ಇ-ಸಹಿ ಹೊಂದಿರುವ ದೃಢೀಕರಣ ಪತ್ರ ಅಥವಾ ಯೋಜನೆಯ ಗುರುತಿನ ಚೀಟಿ ಹೊಂದಿರಬೇಕು.
ಸಿಜಿಎಚ್ಎಸ್ ಅಡಿ ವೈದ್ಯಕೀಯ ಚಿಕಿತ್ಸೆ ಆಧಾರದ ಮೇಲೆ ಯಾವುದೇ ಮಿತಿ ಇಲ್ಲದೆ ಪಾವತಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಡಿ ಸರಕಾರಿ ಆಸ್ಪತ್ರೆಗಳು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ತುರ್ತು ಸಂದರ್ಭದಲ್ಲಿ ನೋಂದಣಿಯಾಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯಬಹುದಾಗಿದ್ದು, ನಿಯಮಾನುಸಾರ ಫಲಾನುಭವಿಗಳು ನಿಯಮಾನುಸಾರ ಮರು ಪಾವತಿ ಪಡೆದುಕೊಳ್ಳಬಹುದು.
ಒಳರೋಗಿ ಚಿಕಿತ್ಸೆಗಾಗಿ ಹಗಲು ಚಿಕಿತ್ಸಾ ಕೇಂದ್ರ, ಕಣ್ಣಿನ ಚಿಕಿತ್ಸಾ ಆಸ್ಪತ್ರೆ, ದಂತ ಚಿಕಿತ್ಸಾ ಆಸ್ಪತ್ರೆಗಳಲ್ಲಿ ಸೌಲಭ್ಯ ಪಡೆಯಬಹುದು. ಆದರೆ ಯೋಜನೆಯಡಿ ಹೊರರೋಗಿ ಚಿಕಿತ್ಸೆಗೆ ಅವಕಾಶವಿಲ್ಲ ಫಲಾನುಭವಿಯು ಒಂದೇ ನೋಂದಾಯಿತ ಆಸ್ಪತ್ರೆಗೆ ಒಂದು ತಿಂಗಳ ಅವಧಿಯಲ್ಲಿ ಮೂರು ಬಾರಿ ಭೇಟಿ ನೀಡಬಹುದು. ಪ್ರತಿ ಭೇಟಿ ವೇಳೆ ಮೂರು ವಿಭಿನ್ನ ತಜ್ಞರನ್ನು ಸಂದರ್ಶಿಸಲೂ ಅವಕಾಶವಿದೆ.
ನೋಂದಾಯಿತ ಆಸ್ಪತ್ರೆಗಳಲ್ಲಿ ವೈದ್ಯಕೀಯ ನಿರ್ಲಕ್ಷ್ಯವಾದರೆ ಎಲ್ಲ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳು ಕುಂದುಕೊರತೆ ಅಧಿಕಾರಿಗಳಿಗೆ ಅಥವಾ ರಾಜ್ಯ ವೈದ್ಯಕೀಯ ಮಂಡಳಿ/ ಭಾರತೀಯ ವೈದ್ಯಕೀಯ ಮಂಡಳಿ ಸಂಪರ್ಕಿಸಬಹುದು, ಹೊರ ರಾಜ್ಯದಲ್ಲಿ ಪ್ರವಾಸದಲ್ಲಿದ್ದಾಗ ನೋಂದಾಯಿತವಲ್ಲದ
ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುವ ಸಂದರ್ಭಎದುರಾದರೆ ಚಿಕಿತ್ಸಾ ವೆಚ್ಚವನ್ನು KASS ದರದನ್ವಯ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಂದ ಮರುಪಾವತಿ ಮಾಡಿಸಿಕೊಳ್ಳಬಹುದು. ಯೂನಿವರ್ಸಲ್ ಇಮ್ಯುನೈಸೇಶನ್ ಕಾರ್ಯಕ್ರಮದಡಿ (ಯುಐಪಿ) ನೀಡಲಾಗುವ ಲಸಿಕೆಗಳು ಹಾಗೂ ನಿರ್ದಿಷ್ಟ ಲಸಿಕೆಗಳಿಗಷ್ಟೇ ಅನ್ವಯ.
▪️ಸಹಾಯವಾಣಿ ಸೌಲಭ್ಯ:
ರಾಜ್ಯ ಸರ್ಕಾರಿ ನೌಕರರು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ಆಸ್ಪತ್ರೆಗಳ ಚಿಕಿತ್ಸಾ ಸಂಬಂಧ ಅಗತ್ಯ ಮಾಹಿತಿಗಳ ವಿಚಾರಣೆಗೆ ಈ ಕೆಳಕಂಡ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು.
ಸಂಖ್ಯೆ: 18004258330